• ನವೀಕೃತ ಕಟ್ಟಡ, ಗ್ಯಾಲರಿ ವ್ಯವಸ್ಥೆ ನೋಡಿ ಖುಷಿ
ನವೀಕೃತ ವೆಂಕಟಪ್ಪ ಚಿತ್ರಶಾಲೆ (Venkatappa Art Gallery) ಲೋಕಾರ್ಪಣೆಯಾಗಿದೆ. ಇನ್ನೇನು ಕೆಲವು ದಿನಗಳಲ್ಲಿ ಸಾರ್ವಜನಿಕ ವೀಕ್ಷಣೆಗೂ ಲಭ್ಯವಾಗಲಿದೆ. ಕೆಲ ಬೇಜವಾಬ್ದಾರಿ ಅಧಿಕಾರಿಗಳೋ, ರಾಜಕಾರಣಿಗಳ ಸಲಹೆಗಾರರೋ ಅಥವಾ ಸ್ವತಃ ರಾಜಕಾರಣಿಗಳ ನಿರ್ಧಾರವೋ ಏನೋ ಗೊತ್ತಿಲ್ಲ. ಕಲಾವಿದರಿಗಾಗಿ, ಕಲಾಪ್ರಿಯರಿಗಾಗಿ ಸಲ್ಲಬೇಕಾದ ವೆಂಕಟಪ್ಪ ಗ್ಯಾಲರಿಯ ಉದ್ಘಾಟನೆಗೆ ಕಲಾವಿದರನ್ನೇ ದೂರವಿಟ್ಟು ಸಮಾರಂಭ ನಡೆಸಿದ ರಾಜ್ಯ ಸರ್ಕಾರದ ಕ್ರಮ ಅತ್ಯಂತ ಸಣ್ಣತನದ್ದು, ಅತ್ಯಂತ ಸ್ವಾರ್ಥದಿಂದ ಕೂಡಿತ್ತೇ ಹೊರತು ಬೇರಿನ್ನೇನೂ ಅಲ್ಲ. ಇದರಿಂದ ಸರ್ಕಾರ ಸಾಧಿಸಿದ್ದೂ ಏನೂ ಇಲ್ಲ. ಇದು ಬಹಳ ಸ್ಪಷ್ಟ. ಇದೇ ಕಾರಣಕ್ಕೆ ಜೂನ್ 12ರಂದು ನಡೆದ ರಾಜಕಾರಣಿಗಳ ಉದ್ಘಾಟನಾ ಸಮಾರಂಭವನ್ನೇ ಬಹಿಷ್ಕರಿಸಿದ್ದ ಕಲಾವಿದರು ಜೂನ್ 13, ಶುಕ್ರವಾರ ಇಂದು ಒಗ್ಗಟ್ಟಿನಿಂದ, ಸಹನೆ, ಶಿಸ್ತು, ಖುಷಿಯಿಂದ ಗ್ಯಾಲರಿಯನ್ನು ಪ್ರವೇಶಿಸಿ ನವೀಕರಣದ ವಿನ್ಯಾಸ ವೀಕ್ಷಿಸಿದೆವು. ಅಷ್ಟೇ ಅಲ್ಲ, ಕಲಾವಿದರ ಈ ನಡೆ ಹೊಸದೊಂದು ಇತಿಹಾಸ ಸೃಷ್ಟಿತು. ರಾಜಕಾರಣಿಗಳು ಮತ್ತು ಕೆಲ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ವಿವಾದಗಳ ಇತಿಹಾಸ ಹೊಂದಿರುವ ವೆಂಕಟಪ್ಪ ಆರ್ಟ್ ಗ್ಯಾಲರಿ ಈಗ ಮಗದೊಂದು ಅಧ್ಯಾಯಕ್ಕೂ ಸಾಕ್ಷಿಯಾಯಿತು. ಕಲಾವಿದರೇ ಸೇರಿ ಗ್ಯಾಲರಿ ಪ್ರವೇಶ ಮಾಡಬೇಕಾದಂತಹ ಪರಿಸ್ಥಿತಿಗೆ ಕಾರಣವಾಗಿದ್ದು ಕರ್ನಾಟಕ ಸರ್ಕಾರವೇ ಹೊರತು ಕಲಾವಿದರಲ್ಲ. ಇದು ಕಟು ಸತ್ಯ. ಸರ್ಕಾರ ಯಾಕಾಗಿ ಹೀಗೆ ಮಾಡಿತೆನ್ನುವುದು ಇನ್ನು ನಮಗೆ ಬೇಕಾಗಿಲ್ಲ. ಇದಕ್ಕೆ ಸ್ಪಷ್ಟನೆ ಪಡೆದು ಆಗಬೇಕಾಗಿದ್ದೂ ಏನೂ ಇಲ್ಲ.
ರಾಜಕಾರಣಿಗಳ ಮಧ್ಯೆ ನುಸುಳಿಕೊಂಡೋ, ಹಿಂಬಾಲಕರ ರೀತಿ ಹೋಗಿ ಗ್ಯಾಲರಿ ವೀಕ್ಷಿಸಿಬಂದೆವು ಎಂದೋ ಎದೆಯುಬ್ಬಿಸಿ ಹೇಳಿಕೊಳ್ಳುವುದರಲ್ಲಿ ಯಾವ ಹಿರಿತನ ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ ಕಲಾವಿದರೆಲ್ಲ ಸೇರಿ ಪ್ರೀತಿಯಿಂದ ಪರಸ್ಪರ ಖುಷಿ ವಿನಿಮಯ ಮಾಡಿಕೊಂಡು ಗ್ಯಾಲರಿ ಪ್ರವೇಶ ಮಾಡಿ ವೀಕ್ಷಿಸಿದ್ದು ಈ ಜನ್ಮದ ಸಾರ್ಥಕ ಕ್ಷಣವೆನಿಸಿತು. ರಾಜಕಾರಣಿಗಳ ಅಥವಾ ಅಧಿಕಾರಿಗಳ ಬಲ ನಮ್ಮಲ್ಲಿಲ್ಲದೇ ಇರಬಹುದು, ಆದರೆ ಕಲಾವಿದರೊಟ್ಟಿಗೆ ನಾನೊಬ್ಬ ಕಲಾವಿದನಾಗಿ ಇದ್ದೇನೆ ಎನ್ನುವುದನ್ನು ಧೈರ್ಯವಾಗಿ ಹೇಳಿಕೊಳ್ಳುವ ಮನೋಬಲ ನಮ್ಮೆಲ್ಲರದ್ದಾಯಿತು.
ಗ್ಯಾಲರಿ ಪ್ರವೇಶ ಸಂದರ್ಭದಲ್ಲಿ ಅನೇಕ ಹಿರಿಯ ಕಲಾವಿದರು ಇದ್ದರು, ಅವರ ಮುಂದಾಳತ್ವದಲ್ಲೆ ಗ್ಯಾಲರಿ ಪ್ರವೇಶವೂ ಆಯಿತು. ಗ್ಯಾಲರಿಯನ್ನು ಸುಂದರ ವಿನ್ಯಾಸದೊಂದಿಗೆ ನವೀಕರಣ ಮಾಡಿಕೊಟ್ಟ ಬ್ರಿಗೇಡ್ ಸಂಸ್ಥೆಯ ಪ್ರತಿನಿಧಿಗಳೂ ಈ ಕ್ಷಣಕ್ಕೆ ಸಾಕ್ಷಿಯಾದರು. ಬಹಳ ಬೇಸರದ ಸಂಗತಿ ಎಂದರೆ ಸರ್ಕಾರದ ಭಾಗವಾಗಿ ಒಬ್ಬನೇ ಒಬ್ಬ ಅಧಿಕಾರಿಯೂ ಹಿರಿಯ ಕಲಾವಿದರು ಬಂದಿರುತ್ತಾರೆ, ಅವರನ್ನು ಗೌರವದಿಂದ ನಡೆಸಿಕೊಳ್ಳೋಣ ಎನ್ನುವ ವ್ಯವಧಾನ ತೋರಲಿಲ್ಲ. ಇರಲಿ, ಬೇಕಾಗಿಲ್ಲ. ಹಿರಿಯ ಕಲಾವಿದರ ಹಾಗೂ ಗ್ಯಾಲರಿಗಾಗಿ ಹೋರಾಟ ನಡೆಸಿದವರನ್ನು ನಾವು ಕಲಾವಿದರೇ ಗೌರವಿಸಿಕೊಳ್ಳುತ್ತೇವೆ. ಪರಸ್ಪರ ನಮ್ಮೆಲ್ಲರ ಪ್ರೀತಿಯೇ ದೊಡ್ಡ ಗೌರವ ಎಂದು ಭಾವಿಸುತ್ತೇವೆ. ಒಂದಂತೂ ಸ್ಪಷ್ಟ ಸರ್ಕಾರ ಈ ರೀತಿಯಾಗಿ ಕಲಾವಿದರನ್ನು ನಡೆಸಿಕೊಳ್ಳಬಾರದು. ಇದು ಅವರಿಗೆ ಶೋಭೆ ತರುವುದಿಲ್ಲ.
| ಗ್ಯಾಲರಿ ಪ್ರವೇಶ ಹೇಗಾಯ್ತು? |
ಗ್ಯಾಲರಿ ಪ್ರವೇಶ ಕಾರ್ಯಕ್ರಮ ಸಂಘಟನಾತ್ಮಕವಾಗಿತ್ತು. ನಾವೆಲ್ಲರೂ ಅಂದುಕೊಂಡಂತೆ ಬೆಳಗ್ಗೆ ಎಲ್ಲಾ ಕಲಾವಿದರೂ ವೆಂಕಟಪ್ಪ ಆರ್ಟ್ ಗ್ಯಾಲರಿಯ ಮುಂಭಾಗದಲ್ಲಿ ಸೇರಿದ್ದೆವು. ಯೋಜನೆಯಂತೆ 12.30ರ ಸುಮಾರಿಗೆ ಅಧಿಕಾರಿಗಳ ಕೆಲ ಸೂಚನೆ ಪಾಲಿಸಿ, ಸಣ್ಣ ಸಣ್ಣ ಗುಂಪಾಗಿ ಗ್ಯಾಲರಿ ಪ್ರವೇಶ ಮಾಡಲಾಯಿತು. ಹಿರಿಯ ಕಲಾವಿದರು ಮೊದಲು ಪ್ರವೇಶಿಸಿದರು. ಬಳಿಕ ಯುವ, ಕಿರಿಯ ಕಲಾವಿದರು ಗ್ಯಾಲರಿಯನ್ನು ಪ್ರವೇಶಿಸಿ ವೀಕ್ಷಿಸಿದೆವು. ಎಲ್ಲರಲ್ಲೂ ಸುಂದರ ಗ್ಯಾಲರಿಯೊಂದು ಕಲಾವಿದರ ಕಲಾಕೃತಿಗಳ ಪ್ರದರ್ಶನಕ್ಕೆ ಲಭ್ಯವಾಗುತ್ತಿದೆಯಲ್ಲ ಎನ್ನುವ ಖುಷಿ, ಆನಂದ ಮನೆ ಮಾಡಿತ್ತು.
ಅದೆಲ್ಲಕ್ಕಿಂತ ಮುಖ್ಯವಾಗಿ ಬೇರೆ ಬೇರೆ ರಾಜ್ಯಗಳಲ್ಲಿ ಇರುವಂತೆ ಕರ್ನಾಟಕದಲ್ಲಿಯೂ ಸರ್ಕಾರಿ ಗ್ಯಾಲರಿಯೊಂದು ಗುಣಮಟ್ಟದಿಂದ ಕೂಡಿದೆ ಎಂದು ಹೇಳಿಕೊಳ್ಳುವ ಧೈರ್ಯ ನಮ್ಮೆಲ್ಲರಲ್ಲಿ ಈಗ ಮೂಡುವಂತಾಯಿತು.
| ವೆಂಕಟಪ್ಪ ಚಿತ್ರಶಾಲೆಯಲ್ಲಿ ಏನೇನಿದೆ? |
ಇದು ಬಹುತೇಕ ಕಲಾವಿದರಲ್ಲಿ, ಕಲಾಪ್ರಿಯರಲ್ಲಿ ಮೂಡಿರುವ ಪ್ರಶ್ನೆ. ಸಂಕ್ಷಿಪ್ತವಾಗಿ ವಿವರಿಸುವ ಒಂದು ಪ್ರಯತ್ನ ಇದು. ಮುಖ್ಯಧ್ವಾರದಿಂದ ಗ್ಯಾಲರಿ ಪ್ರವೇಶಿಸುತ್ತಿದ್ದಂತೆ ಬಲಭಾಗದಲ್ಲಿ ವರ್ಣಶಿಲ್ಪಿ ವೆಂಕಟಪ್ಪ ಅವರ ಶಿಲ್ಪವೊಂದನ್ನು ಇರಿಸಲಾಗಿದೆ. ಅಲ್ಲಿಂದ ಮುಂದೆ ಸಾಗಿದರೆ, ಈ ಮೊದಲು ವೆಂಕಟಪ್ಪ ಅವರ ಕಲಾಕೃತಿಗಳನ್ನು ಇರಿಸಲಾಗಿದ್ದ ಸ್ಥಳದಲ್ಲಿ ಈಗ ಕಲಾಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದಕ್ಕೆ ಹೊಂದಿಕೊಂಡು ಇನ್ನೆರಡು ಗ್ಯಾಲರಿಗಳು ಪ್ರದರ್ಶನಕ್ಕೆ ಲಭ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಎಲ್ಲವೂ ಅತ್ಯಂತ ಸುಸಜ್ಜಿತ ಗ್ಯಾಲರಿಗಳು. ಇದೀಗ ಒಂದು ಗ್ಯಾಲರಿಯಲ್ಲಿ ನಾಡಿನ ಹಿರಿಯ ಕಲಾವಿದರಾದ ರುಮಾಲೆ ಚೆನ್ನಬಸವಯ್ಯ ಅವರ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ.
ಇನ್ನು ಮೊದಲ ಮಹಡಿಯಲ್ಲಿ ವರ್ಣಶಿಲ್ಪಿ ವೆಂಕಟಪ್ಪ ಅವರ ಕಲಾಕೃತಿಗಳನ್ನು, ಅವರು ನಡೆದು ಬಂದ ದಾರಿ, ಅವರ ಸಂಗ್ರಹದಲ್ಲಿದ್ದ ವಾದ್ಯಗಳು, ಅವರು ಬಳಕೆಯ ಕಲಾ ಉಪಕರಣಗಳನ್ನೆಲ್ಲಾ ಸಂಗ್ರಹಾಲಯದಲ್ಲಿನ ಮಾದರಿಯಲ್ಲಿ ಪ್ರದರ್ಶಿಸಲಾಗಿದೆ. ವೆಂಕಟಪ್ಪ ಅವರ ಕುರಿತಾದ ಅಧ್ಯಯನಕ್ಕೆ ಯೋಗ್ಯವಾದ ರೀತಿಯಲ್ಲಿ ಪ್ರದರ್ಶಿಸಿರುವುದನ್ನು ಕಾಣಬಹುದಾಗಿದೆ. ಇನ್ನೊಂದು ಮಹಡಿಯಲ್ಲಿ ಕರ್ನಾಟಕದ ಖ್ಯಾತ ಕಾಲಾವಿದರಲ್ಲಿ ಒಬ್ಬರಾದ ಕೆ.ಕೆ. ಹೆಬ್ಬಾರ್ ಅವರ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ. 1993ರಲ್ಲಿ ಹೆಬ್ಬಾರ್ ಅವರ ಕಲಾಕೃತಿಗಳನ್ನು ವೆಂಕಟಪ್ಪ ಗ್ಯಾಲರಿಗೆ ಕೊಡುಗೆಯಾಗಿ ನೀಡಲಾಗಿತ್ತು. ಆದರೆ, ಈ ಮೊದಲು ಇವೆಲ್ಲದರ ವೀಕ್ಷಣೆ ಸಾಧ್ಯವಾಗುತ್ತಿರಲಿಲ್ಲ. ಇದಲ್ಲದೆ, ಕಲಾ ಚಟಿವಟಿಕೆಗಳಿಗೆ ಅನುಕೂಲವಾಗುವ ರೀತಿಯಲ್ಲಿ ಹೊರಾವರಣ ವಿನ್ಯಾಸಗೊಂಡಿದೆ.
ಈಗಷ್ಟೇ ಉದ್ಘಾಟನೆಯಾಗಿರುವ ಗ್ಯಾಲರಿ ಇನ್ನೇನು ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗಲಿದೆ. ಬಹುಶಃ ಶೀಘ್ರದಲ್ಲೇ ಇದಕ್ಕೆ ಅವಕಾಶ ಮಾಡಿಕೊಡಬಹುದು ಎನ್ನಲಾಗಿದೆ. ಕಾದು ನೊಡೋಣ.



















