ವೆಂಕಟಪ್ಪ ಕಲಾವಿದರಿಂದ ಉದ್ಘಾಟನೆ ಆಗಬೇಕು!

Share This

  • ವೆಂಕಟಪ್ಪ ಚಿತ್ರಶಾಲೆ ಉದ್ಘಾಟನೆಗೆ ಕಲಾವಿದರನ್ನೇ ಮರೆತ ಸರ್ಕಾರ
ವೆಂಕಟಪ್ಪ ಚಿತ್ರಶಾಲೆ ಉದ್ಘಾಟನೆಯ ವಿಚಾರದಲ್ಲಿ ಆಗುತ್ತಿರುವ ಬೆಳವಣಿಗೆ ಅನೇಕ ಕಲಾವಿದರ ಮತ್ತು ಕಲಾಪ್ರಿಯರ ಅಸಮಾಧಾನಕ್ಕೆ ಕಾರಣವಾಗಿದೆ. ಕಲಾಸಮುದಾಯದಿಂದಲೆ ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ಬೇಕು. ಲಲಿತಕಲಾ ಮತ್ತು ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷರು ಮತ್ತು ಸದಸ್ಯರೆಲ್ಲರೂ ರಾಜೀನಾಮೆ ಕೊಟ್ಟು ಇಡೀ ಸಮುದಾಯದ ಪರವಾಗಿ ನಿಲ್ಲುವ, ಗಟ್ಟಿ ಧ್ವನಿಯಾಗುವ ನಿರ್ಧಾರಕ್ಕೆ ಬರಲಿ. ಇವರೆಲ್ಲರೂ ಕಲಾಕ್ಷೇತ್ರದ ಮುಂದಾಳುಗಳಾಗಿ ನಿಲ್ಲುವ ಮನಸ್ಸು ಮಾಡಲಿ. ಸಾಹಿತ್ಯ ಕ್ಷೇತ್ರದಲ್ಲಿ ಆಗಿದ್ದರೆ ಇಷ್ಟೊತ್ತಿಗಾಗಲೆ ಅಧಿಕಾರಿಗಳ ಬೆವರು ಇಳಿಸುತ್ತಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರೇ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಸ್ಥಾನ ಪಡೆದಿಲ್ಲ ಎಂದಾದರೆ ಇದೆಂತಹ ಅತಿರೇಕತನ ಯೋಚಿಸಬೇಕಲ್ಲವೆ? ಯಾರು ಇವರಿಗೆ ಈ ಸಲಹೆ ಕೊಟ್ಟವರು? ಅಧಿಕಾರಿಗಳಾದರೂ ಹೇಗೆ ಈ ಸಲಹೆಗೆ ಒಪ್ಪಿಕೊಂಡರು?
ಇದನ್ನು ಕಲಾಸಮುದಾಯಕ್ಕೆ ಮಾಡಿದ ಅವಮಾನ ಎಂದು ಯಾಕೆ ಪರಿಗಣಿಸಬಾರದು? ಎಲ್ಲವೂ ನಡೆದ ಬಳಿಕ ರಿಪೇರಿ ಕೆಲಸ ಮಾಡಲು ಮುಂದಾಗ್ತಾರೆ. ಇದಕ್ಕೆ ಬಗ್ಗದ ಪ್ರತಿಕ್ರಿಯೆ ಅಕಾಡೆಮಿ ಅಧ್ಯಕ್ಷರು, ಸದಸ್ಯರಿಂದ ಬರಲಿ. ನಿಷ್ಠುರ ನಿರ್ಧಾರ, ಪ್ರತಿಕ್ರಿಯೆ ವ್ಯಕ್ತವಾಗಲಿ. ತಪ್ಪೇನಿಲ್ಲ. ವೆಂಕಟಪ್ಪ ಚಿತ್ರಶಾಲೆ ಉಳಿವಿಗಾಗಿ ಹೋರಾಟ ಮಾಡಿರುವ ಹಿರಿಯ ಜೀವಗಳನ್ನೂ ಸ್ಮರಿಸದ, ನೆನಪಿಸಿಕೊಳ್ಳದ ನಡೆ ಒಪ್ಪಲು ಸಾಧ್ಯವೇ ಇಲ್ಲ.
ವೆಂಕಟಪ್ಪ ಗ್ಯಾಲರಿ ನಿರ್ವಹಣೆಗೆ ಸಂಬಂಧಿಸಿ ಕಲಾವಿದರನ್ನು ಒಳಗೊಂಡ ಸಮಿತಿಯೊಂದು ರಚನೆಯಾಗಿದೆ ಎಂದು ಕೇಳ್ಪಟ್ಟಿದ್ದೇನೆ. ಇದು ಹೌದೇ ಆದಲ್ಲಿ, ಸಮಿತಿ ಸದಸ್ಯ ಕಲಾವಿದರೂ ತೀಕ್ಷ್ಣವಾದ ಧ್ವನಿ ಎತ್ತಲಿ. ರಾಜೀನಾಮೆ ಕೊಟ್ಟು ಆಚೆಬರಲಿ. ಖಂಡಿತವಾಗಿಯೂ ಈ ನಡೆ ತಪ್ಪಾಗಲಾರದು.
ವೆಂಕಟಪ್ಪ ಗ್ಯಾಲರಿ ಪುನಾರಂಭದ ಸಂಭ್ರಮ ಈಗಲೂ ನಮಗೆಲ್ಲರಿಗಿದೆ. ಅವರೇನೆ ಮಾಡಿಕೊಳ್ಳಲಿ. ನಾವು ಒಟ್ಟಾಗಿ ಸಂಭ್ರಮಿಸೋಣ.

Share This

Leave a Reply

Your email address will not be published. Required fields are marked *