• ಆತ್ಮೀಯ ಪ್ರೀತಿ ತೋರಿದ ದಕಹವಿಸ ಸದಸ್ಯರು
• ಇದು ದಿನಾಚರಣೆ ಆಗಿರಲಿಲ್ಲ, ಬಣ್ಣದ ಹಬ್ಬ
ಬಣ್ಣದಷ್ಟೇ ಸುಂದರ ಕ್ಷಣಗಳು ಅವು. ಕಲಾವಿದರ ಜೊತೆ ನಡೆಸಿದ ಇಂಚಿಂಚು ಮಾತುಕತೆ ನಿಸ್ಕಲ್ಮಶ. ವಿಶ್ವ ಕಲಾ ದಿನವನ್ನು ಇಷ್ಟೊಂದು ಸಂತಸದಿಂದ ಕಳೆಯಲು ಸಾಧ್ಯವಾಗಿಸಿದ್ದು ದಾವಣಗೆರೆ ಕಲಾಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘ (ದಕಹವಿಸ)!
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ
ಅಚ್ಚುಕಟ್ಟಾಗಿ ಆಯೋಜನೆಯಾಗಿದ್ದ ಒಂದು ದಿನದ ಕಲಾಪ್ರದರ್ಶನ ಮತ್ತು ಮಿತ್ರಕೂಟ ಸಂಭ್ರಮ ನೆನಪಿನಂಗಳದಿಂದ ಮಾಸಲು ಸಾಧ್ಯವಿಲ್ಲ. ಅಕ್ಷರಶಃ ಅಲ್ಲೊಂದು ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಜೊತೆಗೆ ಇತ್ತೀಚೆಗಷ್ಟೆ ಪ್ರತಿಷ್ಠಿತ ಸ್ಯಾಮ್ ಗಿಲ್ಲಿಯಸ್ ಪ್ರಶಸ್ತಿಗೆ ಪಾತ್ರರಾದ ಶೀಲಾ ಗೌಡ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಕಲಾವಿದರಾದ ಚಂದ್ರನಾಥ್ ಆಚಾರ್ಯ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ದಕಹವಿಸ ಅಧ್ಯಕ್ಷರಾದ, ಕಲಾವಿದರಾದ ಚಿ.ಸು.ಕೃಷ್ಣ ಸೆಟ್ಟಿ, ಲಲಿತಕಲಾ ಅಕಾಡೆಮಿ ಅಧ್ಯಕ್ಷರಾದ ಪ.ಸ.ಕುಮಾರ್, ಸಿ.ಚಂದ್ರಶೇಖರ್, ವಿ.ಹರಿರಾಮ್, ರಾಮಮೂರ್ತಿ, ವೇಣುಗೋಪಾಲ್, ಪ್ರಹ್ಲಾದ್ ಆಚಾರ್ಯ, ಬಾಬು ಜತ್ಕರ್ ಸೇರಿದಂತೆ ಅನೇಕ ಹಿರಿಯ ಕಲಾವಿದರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಲಾವಿದ ಗಣಪತಿ ಹೆಗಡೆ ಅವರು ಕಾರ್ಯಕ್ರಮ ನಿರೂಪಿಸಿದರು..
ಮೇಲ್ನೋಟಕ್ಕೆ ಇದೊಂದು ಕಾರ್ಯಕ್ರಮ ನಿಜ. ಆದರೆ ಅಲ್ಲೊಂದು ಆತ್ಮೀಯ ಕ್ಷಣಗಳನ್ನು ಸವಿಯಲು ಸಾಧ್ಯವಾಯಿತು. ಸಾಕಷ್ಟು ಮಂದಿ ಕಲಾವಿದರು ಸ್ನೇಹಿತರನ್ನು ಭೇಟಿ ಮಾಡಲು ಸಾಧ್ಯವಾಗುತ್ತದೆ ಎನ್ನುವ ಕಾರಣಕ್ಕಾಗಿಯೇ ಅಗಮಿಸಿದ್ದರು. ಹೀಗಾಗಿ ಮನೆಯ ಹಬ್ಬದ ಸಂಭ್ರಮ ಕಾಣಿಸಿತು. ಹಳೆಯ ನೆನಪುಗಳು ಮರುಕಳಿಸಿದವು. ಕಲಾವಿದರ ನಿತ್ಯ ಕೈಂಕರ್ಯದ ಮಾತುಕತೆ, ಒಂದಿಷ್ಟು ಗಂಭೀರ ಚರ್ಚೆ, ನಡು ನಡುವೆ ಹೊಟ್ಟೆ ನೋವುಬರುವಷ್ಟು ಚಟಾಕಿಗೆ ನಗು, ಸಂಭ್ರಮ ಹಂಗಾಮಕ್ಕೆ ಸಾಕ್ಷಿಯಾದೆವು. ವಿಭಿನ್ನ ಕಲಾಕೃತಿಗಳ ಪ್ರದರ್ಶನದ ಜೊತೆ ಅನುಭವ ವಿನಿಮಯ, ಹರಟೆಗೆ ಮಾರುಹೋಗಿದ್ದೆವು. ಸಮಯ ಕಳೆದಿದ್ದೇ ಗೊತ್ತಾಗದ ಹಾಗೆ ಅತ್ಯಂತ ಅರ್ಥಪೂರ್ಣ ‘ವಿಶ್ವ ಕಲಾ ದಿನ’ ಆಚರಣೆ ಸಾಧ್ಯವಾಯಿತು.
ಇಂತಹ ಅರ್ಥಪೂರ್ಣ ‘ವಿಶ್ವ ಕಲಾ ದಿನ’ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಅನಂತಾನಂತ ಧನ್ಯವಾದಗಳು. ಮತ್ತೆ ಮತ್ತೆ ಏನಾದರೊಂದು ನೆಪವೊಡ್ಡಿ ‘ಕಲಾ ಸಂಗಮ’ಕ್ಕೆ ಸಾಕ್ಷಿಯಾಗೋಣ.