– ಹಾಸನದಲ್ಲಿ ನಡೆದ ವಿಶಿಷ್ಠ, ವಿಭಿನ್ನ ಕಾರ್ಯಾಗಾರ
ಕಲೆಗೆ ಸಂಬಂಧಿಸಿದ ಚರ್ಚೆಗಳು ಆಗಬೇಕು, ಮುಕ್ತವಾಗಿ ಮಾತನಾಡುವ ವೇದಿಕೆ ಸೃಷ್ಟಿಯಾಗಬೇಕು ಎನ್ನುವುದನ್ನು ಅನೇಕ ಸಂದರ್ಭಗಳಲ್ಲಿ ಬಯಸಿದ್ದಿದೆ. ಕಳೆದ ಕೆಲ ವರ್ಷಗಳಿಂದ ಒಂದಿಷ್ಟು ಸಂವಾದಗಳನ್ನೂ ಮಾಡಿದ್ದಾಗಿದೆ. ಆದರೆ, ಸಮಾಧಾನ ತರುವಂತಹ ಚರ್ಚೆಗಳು ನಡೆದಿದ್ದು ಕಡಿಮೆ. ಅವರವರ ಮೂಗಿನ ನೇರಕ್ಕೆ ಮಾತನಾಡುವುದನ್ನು ನೋಡಿದ ಅನುಭವ ಹೆಚ್ಚು. ಚರ್ಚೆ ವಿಷಯಾಂತರವಾಗಿ ಚರ್ಚಿಸಬೇಕಾದ್ದನ್ನೆ ಮರೆತದ್ದೂ ಆಗಿದೆ. ಹೊಸತೊಂದನ್ನು ತಿಳಿದುಕೊಳ್ಳಲು ಸಾಧ್ಯವಾಯಿತು ಎನ್ನುವ ಭಾವ ಮೂಡಿದ್ದು ಅಷ್ಟಕ್ಕಷ್ಟೆ.
ಆದರೆ, ಹಾಸನದ ದೇಸಾಯಿ ಸ್ಟುಡಿಯೋ/ಕಲಾಶ್ರೀ ಗ್ಯಾಲರಿಯಲ್ಲಿ ಮೇ 15, 16, 17 ಮತ್ತು 18ರಂದು ನಡೆದ ನೆಕ್ಸ್ ಸ್ಟೆಪ್ 2 / Nextstep-2 ಕಾರ್ಯಾಗಾರದ ಅನುಭವ ವಿಭಿನ್ನವಾಗಿತ್ತು. ಆಲೋಚನಾ ಲಹರಿ ಮತ್ತು ಯೋಚನಾ ಕ್ರಮಕ್ಕೆ ಸಂಬಂಧಿಸಿ , ಸಿದ್ದಾಂತಗಳನ್ನು ಮೀರಿದ ವಿಚಾರಗಳನ್ನು ಮುಂದಿಟ್ಟುಕೊಂಡು ಅಭಿಪ್ರಾಯ ವಿನಿಮಯ ಮಾಡಿಕೊಳ್ಳುವಂತಹ ಒಂದು ಸುಂದರ ಮತ್ತು ಆರೋಗ್ಯಕರ ಸಂವಾದಕ್ಕೆ ಈ ವೇದಿಕೆ ಸಾಕ್ಷಿಯಾಯಿತು. ಬಿಸಿ ಚರ್ಚೆಗಳ ಜೊತೆಗೆ ನಾವು ರಚಿಸಿರುವ ಕಲಾಕೃತಿಗಳನ್ನೆ ಪ್ರದರ್ಶಿಸಿ ಮಾತನಾಡುವ, ಸಂದರ್ಶಿಸಿ ಮಾತು ಕೇಳುವ ಹಾಗೂ ಸಾಧನೆಯ ಶಿಖರವೇರಿದವರ ಕುರಿತಾಗಿ ಪರಸ್ಪರ ಮಾಹಿತಿ ಹಂಚಿಕೊಳ್ಳುವ ಮಿಂಚಿನಂತಹ ಬೆಳಕುಗಳು ಹರಿದವು. ಹಿರಿಯರ ಅನುಭವದ ಮಾತುಗಳು ಬಂದವು. ಹೊಸದಿಕ್ಕಿನತ್ತ ಸಾಗಲೇಬೇಕೆನ್ನುವ ಕಲಾ ಮನಸ್ಸುಗಳಿಗೆ ಆ ಕ್ಷಣದ ಸಲಹೆಗಳು ದಾರಿದೀಪವಾಗುವ ಭರವಸೆ ಮೂಡಿಸಿರಲುಬಹುದು. ಧನಾತ್ಮಕ ಮತ್ತು ಋಣಾತ್ಮಕ ಚಿಂತನೆಗಳ ನೆಲೆಯಲ್ಲೆ ಹೊಸ ಚಿಂತನೆಗಳ ಮೂಲಕ ಹೊಸ ಹೊಸ ಕಲಾಕೃತಿಗಳನ್ನು ರಚಿಸಬೇಕೆನ್ನುವ ಉತ್ಸಾಹ ಇಮ್ಮಡಿಯಾಯ್ತು.
ಹಾಸನದ ಚಿತ್ಕಲಾ ಫೌಂಡೇಶನ್ ಸಹಕಾರದೊಂದಿಗೆ ಬೆಂಗಳೂರಿನ ಕೃಷ್ಣ ಸೆಟ್ಟಿ ಫೌಂಡೇಶನ್ ಆಯೋಜಿಸಿದ್ದ ಕಾರ್ಯಾಗಾರ ಹೊಸ ಬೆಳಕು ಚೆಲ್ಲುವ ಯಶಸ್ವಿ ಪ್ರಯತ್ನವಾಯ್ತು.
ಕಾರ್ಯಾಗಾರ ಕುರಿತು ಅನೇಕರಲ್ಲಿ ಸಹಜವಾದ ಒಂದು ಕುತೂಹಲವಿದೆ. ಕಲಾಕೃತಿಗಳನ್ನು ರಚಿಸುವುದಿಲ್ಲ ಎಂದಾದರೆ ಇನ್ನೇನು ನಡೆಯುತ್ತೆ ಎಂದು. ಒಂದಂತೂ ಸತ್ಯ, ಇದೊಂದು ಅತ್ಯುತ್ತಮ ಪ್ರಯತ್ನ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಪಾಲ್ಗೊಳ್ಳುವ ಕಲಾವಿದ ಈ ಮುಕ್ತ ಚರ್ಚೆಯ ಉದ್ದೇಶಕ್ಕೆ ಅನುಗುಣವಾಗಿ, ಧನಾತ್ಮಕವಾಗಿ ಯೋಚಿಸಿ ಹೆಜ್ಜೆ ಇಟ್ಟರೆ ಅದಕ್ಕೆ ತಕ್ಕುದಾದ ಫಲಿತಾಂಶವನ್ನೆ ಪಡೆದುಕೊಳ್ಳಲು ಸಾಧ್ಯವಿದೆ ಎನ್ನುವುದನ್ನು ಇಂತಹ ಕಾರ್ಗಾಗಾರಗಳು ತೋರಿಸಿಕೊಡುತ್ತವೆ. ಕಾರ್ಪೊರೇಟ್ ವ್ಯವಸ್ಥೆಯಲ್ಲಿ ಇಂತಹ ಅನೇಕ ಪ್ರಯತ್ನಗಳು ನಡೆಯುತ್ತವೆ. ಕಲಾಕ್ಷೇತ್ರಕ್ಕೆ ಇದು ಕೊಂಚ ಅಪರೂಪ. ಇದರ ಲಾಭ ಪಡೆದುಕೊಳ್ಳುವ ಎಲ್ಲಾ ಅವಕಾಶಗಳು ನಾವು ಹೇಗೆ ಸ್ವೀಕರಿಸುತ್ತೇವೆ ಎನ್ನುವುದನ್ನು ಆಧರಿಸಿದೆಯಷ್ಟೆ.
ಕಾರ್ಯಾಗಾರ ನಿರ್ದೇಶಕರಾದ ಹಿರಿಯ ಕಲಾವಿದರು, ಕೇಂದ್ರ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷರೂ, ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ಪುರಸ್ಕೃತರೂ ಆದ ಚಿ.ಸು.ಕೃಷ್ಣಸೆಟ್ಟಿ ಅವರ ರೂಪುರೇಷೆಯಂತೆ ಕಾರ್ಯಕ್ರಮ ನಡೆದವು. ಇನ್ನೊಬ್ಬರು ಹಿರಿಯ ಕಲಾವಿದರಾದ, ಅನುಭವಿಗಳಾದ ವಿ. ಹರಿರಾಂ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡರು. ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಎಲ್ಲಾ ಕಲಾವಿದರು ತಮ್ಮ ಕಲಾಕೃತಿಗಳ ಕುರಿತು, ಕಲಾಕೃತಿ ರಚನೆಗೆ ಪಡೆದುಕೊಳ್ಳುವ ಸ್ಫೂರ್ತಿಯ ಕುರಿತು, ಕಲಾಕೃತಿ ರಚನೆಯ ಕ್ರಮ ಮತ್ತು ಪ್ರಕ್ರಿಯೆಯ ಕುರಿತು ಮಾತನಾಡಿದರು. ಪರಸ್ಪರ ಸಲಹೆಗಳನ್ನು ನೀಡಿ, ಇನ್ನೊಬ್ಬರ ಕಲಾಕೃತಿಯ ಬಗ್ಗೆ ವಿಮರ್ಶಾತ್ಮಕವಾಗಿ ಅಭಿಪ್ರಾಯ ಹಂಚಿಕೊಳ್ಳುವ, ವಿಮರ್ಶಾತ್ಮಕ ನೆಲೆಯಲ್ಲಿ ನೋಡುವ ಪ್ರಯತ್ನ ಮಾಡಿದರು.
ಸಾಮಾನ್ಯವಾಗಿ ಕಲಾಕೃತಿಯಲ್ಲಿನ ಋಣಾತ್ಮಕವಾದ ಅಂಶಗಳ ಬಗ್ಗೆ ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳುವ ಪ್ರಯತ್ನಗಳನ್ನು ಮಾಡದಿರುವವರೆ ಹೆಚ್ಚು. ಆದರೆ ಈ ಕಾರ್ಯಾಗಾರದಲ್ಲಿ ಹೀಗಾಗಲಿಲ್ಲ. ಋಣಾತ್ಮಕವಾದ ಅಂಶಗಳನ್ನು ಹೇಳುವುದರ ಜೊತೆಗೆ, ಕಲಾಕೃತಿಯನ್ನು ಅರ್ಥಪೂರ್ಣಗೊಳಿಸಲು ಏನೆಲ್ಲಾ ಮಾಡಬಹುದಿತ್ತು, ಬೇರಿನ್ನೇನೇನು ಅವಕಾಶವಿತ್ತು ಎನ್ನುವುದರ ಕುರಿತಾಗಿಯೂ ಕಲಾವಿದರು ಅಭಿಪ್ರಾಯಗಳನ್ನು ಹಂಚಿಕೊಂಡರು. ಈ ಪ್ರಕ್ರಿಯೆ ನಡೆಯುವುದು ಬಹಳ ವಿರಳ. ಆದರೆ ಇದನ್ನು ಸಾಧ್ಯವಾಗಿಸಲು ಈ ವೇದಿಕೆಯಲ್ಲಿ ಎಲ್ಲರೂ ಸ್ವತಂತ್ರ ಪ್ರಯತ್ನ ನಡೆಸಿದ್ದಿ ವಿಶೇಷವಾಗಿತ್ತು.
ಈ ವಿಶೇಷ ಸಂದರ್ಭಕ್ಕೆ ಕಾರಣೀಕರ್ತರಾದ ಕೃಷ್ಣ ಸೆಟ್ಟಿ ಅವರು, ಸ್ಥಳಾವಕಾಶ ಮಾಡಿಕೊಟ್ಟ ದೇಸಾಯಿ ಅವರು ಅಭಿನಂದನಾರ್ಹರು. ಪರಸ್ಪರ ಅಭಿಪ್ರಾಯ ಗೌರವಿಸಿ, ಚರ್ಚಿಸುವಂತಹ ಇಂತಹ ಕಾರ್ಯಾಗಾರಗಳು ಕಲಾಕ್ಷೇತ್ರದ ಒಳಿತಿಗಾಗಿ ಇನ್ನಷ್ಟು ನಡೆಯಲಿ. ವಿಚಾರ ವಿನಿಮಯವಾಗಲಿ. ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಎಲ್ಲಾ ಮಿತ್ರರಿಗೆ ಧನ್ಯವಾದಗಳು
.


