ಚಿತ್ರಕಲಾ ಪರಿಷತ್ತಿನಲ್ಲಿ 2 ವಿಭಿನ್ನ ಕಲಾಪ್ರದರ್ಶನ!

Share This

ಕರ್ನಾಟಕ ಚಿತ್ರಕಲಾ ಪರಿಷತ್ ಗ್ಯಾಲರಿಗಳಲ್ಲಿ ಎರಡು ವಿಭಿನ್ನ ಸಮೂಹ ಕಲಾಪ್ರದರ್ಶನ ನಡೆಯುತ್ತಿದ್ದು, ಬೇರೆ ಬೇರೆ ಕಾರಣಗಳಿಂದಾಗಿ ಕೆಲವು ಕಲಾಕೃತಿಗಳು ಗಮನ ಸೆಳೆದವು. ಇನ್ನು ಕೆಲವು ಕಲಾಕೃತಿಗಳು ತನ್ನ ಗುಣಮಟ್ಟದ ಕಾರಣಕ್ಕಾಗಿಯೆ ಕಳೆದು ಹೋಗುತ್ತಿವೆಯೇನೊ ಅನಿಸಿದವು.
ವಿಶ್ವನಾಥ್ ಎಸ್.ಹಿರೇಮಠ್, ಮಲ್ಲಿಕಾರ್ಜುನ್ ವಿ.ಕೊರಳ್ಳಿ, ರೇಖಾ ಕಲಬುರ್ಗಿ, ವೆಂಕಟೇಶ್ ಕುಮಾರ್ ಕೆ.ಎಚ್. ದಾನಯ್ಯ ಚೌಕಿಮಠ್ ಮತ್ತು ಬಸವರಾಜ್ ಕೆ.ಕೆ. ಅವರ ಕಲಾಕೃತಿಗಳನ್ನೊಳಗೊಂಡ ಸಮೂಹ ಕಲಾಪ್ರದರ್ಶನ ಒಂದು ಉತ್ತಮ ಪ್ರಯತ್ನವೆನಿಸಿತು. ದಾನಯ್ಯ ಅವರ ಶಿಲ್ಪಗಳು ಆಪ್ತವೆನಿಸಿದವು. ಮನುಷ್ಯ ಭಾವನೆಗಳು ಮತ್ತು ಪ್ರಕೃತಿ ವೈಶಿಷ್ಟ್ಯಗಳನ್ನು ಶಿಲ್ಪಕ್ಕೆ ಹೊಂದಿಕೊಳ್ಳುವಂತೆ ಬಳಸಿಕೊಂಡಿರುವುದು ಕಲಾಕೃತಿಗಳಲ್ಲಿನ ವಿಶೇಷತೆ. ಹಾಗೆ ವಿಶ್ವನಾಥ್ ಅವರ ಅಮೂರ್ತ ಮತ್ತು ಇಂಪಾಸ್ಟೋ (Impasto) ತಂತ್ರಗಾರಿಕೆಯಲ್ಲಿ ರೂಪುಗೊಂಡಿರುವ ಕಲಾಕೃತಿಗಳಲ್ಲಿ ಕೆಲವು ಉತ್ತಮ ವೆನಿಸಿದವು. ಬಣ್ಣಗಳನ್ನು ಬಳಸಿಕೊಂಡಿರುವ ರೀತಿ ಮತ್ತು ಸಂಯೋಜನೆ ಗಮನಸೆಳೆದವು. ಮಲ್ಲಿಕಾರ್ಜುನ್ ಮತ್ತು ವೆಂಕಟೇಶ್ ಕುಮಾರ್ ಅವರ ಕಲಾಕೃತಿಗಳಲ್ಲಿ ಪೌರಾಣಿಕ, ಸಾಂಪ್ರದಾಯಿಕ ಮತ್ತು ಜನಪದ ಶೈಲಿಗಳಲ್ಲಿನ ಪ್ರಭಾವ ಕಾಣಿಸಿತು. ಇನ್ನು ಬಸವರಾಜ್ ಅವರ ಕಲಾಕೃತಿಗಳು ಫೋಟೋ ರಿಯಲಿಸ್ಟಿಕ್ ಅನಿಸುವಷ್ಟು ವಾಸ್ತವಿಕತೆಗಳನ್ನು ಒಳಗೊಂಡಿವೆ. ರೇಖಾ ಕಲಬುರ್ಗಿ ಅವರ ಕಲಾಕೃತಿಗಳಲ್ಲಿ ಟಿಪಿಕಲ್ ಉತ್ತರ ಕರ್ನಾಟಕದ ಸಂಸ್ಕೃತಿಯನ್ನು ಕಾಣಬಹುದಾಗಿದೆ.

 

ದೃಶ್ಯ ಸಂಗಮ 3ನೇ ಆವೃತ್ತಿ!
Visual Confluence ಶೀರ್ಷಿಕೆಯ ೩ನೇ ಆವೃತ್ತಿಯ ಸಮೂಹ ಕಲಾಪ್ರದರ್ಶನದಲ್ಲಿಯೂ ಒಂದಿಷ್ಟು ಕಲಾಕೃತಿಗಳು ಗಮನ ಸೆಳೆಯುವಂತಿದ್ದವು. ಬಹುತೇಕ ಕಲಾವಿದರು ಉತ್ತರ ಭಾರತದ ಮೂಲದವರಾಗಿದ್ದು, ಅವರ ಕಲಾಕೃತಿಗಳಲ್ಲಿಯೂ ಉತ್ತರದ ಕಂಪು ಇತ್ತು.
ಅಮರ್ ಜ್ಯೋತಿ ಶರ್ಮ, ರೌನಕ್ ರೈ, ಸೌಮೇಂದ್ರ ಸರ್ಕಾರ್, ಕೌಶಿಕ್ ಸರ್ಕಾರ್, ಅಜಯ್ ಕುಮಾರ್, ಪಂಕಜ್ ಶರ್ಮ, ರಿಚಾ ಚಂದ್ರ, ಶಾಂತಿ ಕುಮಾರ್ ಟಿರ್ಕಿ, ಕೌಶಲೇಶ್ಕುಮಾರ್, ಅವೀಕ್ ಚಕ್ರವರ್ತಿ, ಅಜಯ್ ಮಿಶ್ರಾ, ಮೊನಾ ರಘುವಂಶಿ, ದೀಪಕ್ ದೋಂಗ್ರೆ, ಸಿಲ್ವಿಯಾ ದಾಸ್ಗುಪ್ತಾ, ಅಬಾಕ್ ಕುಂಡು, ಅಶೋಕ್ ವರ್ಮ, ಗಿರೀಶ್ ಚೌರಾಸಿಯಾ, ಸಜಿತ್ ಮಿಂಜಿ, ಸುನಿಲ್ ಕುಮಾರ್ ಮತ್ತು ಮೊನೋಶ್ರೀ ರಾಯ್ ಅವರ ಕಲಾಕೃತಿಗಳು ಪ್ರದರ್ಶನದಲ್ಲಿವೆ. ದೇಶದ ಎಲ್ಲಾ ಭಾಗಗಳಲ್ಲಿ ಕಾಣಸಿಗುವ ವಿಭಿನ್ನ ಧೋರಣೆ, ಶೈಲಿಯ ಕಲಾಕೃತಿಗಳ ಸಂಗಮ ಈ ಕಲಾಪ್ರದರ್ಶನದಲ್ಲಿದೆ. ಹಾಗೇ ವಿಭಿನ್ನ ಪ್ರಕಾರದ ಕಲಾಕೃತಿಗಳನ್ನು ನೋಡಬಹುದಾಗಿದೆ.
ಈ ಎರಡೂ ಪ್ರದರ್ಶನಗಳು ಜೂನ್ 15, ಭಾನುವಾರ (ಇಂದು) ಸಂಪನ್ನಗೊಳ್ಳಲಿವೆ.

Share This

Leave a Reply

Your email address will not be published. Required fields are marked *