ಕಲಾವಿದ ವಾಡೆಗೆ ವಿಜಯ ಸಿಂಧೂರ ಪ್ರಶಸ್ತಿ! 

Share This

• ಇಂದು ಜಮಖಂಡಿಯಲ್ಲಿ ಪ್ರಶಸ್ತಿ ಪ್ರದಾನ
ಕರ್ನಾಟಕ ಚಿತ್ರಕಲಾ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಿರುವ ಹಿರಿಯ ಕಲಾವಿದರಾದ, ಪ್ರತಿಷ್ಠಿತ ವರ್ಣಶಿಲ್ಪಿ ಕೆ.ವೆಂಕಟಪ್ಪ ಪ್ರಶಸ್ತಿ ಪುರಸ್ಕೃತರಾದ ದಿವಂಗತ ವಿಜಯ ಸಿಂಧೂರ ಅವರ ಜನ್ಮದಿನ ಇಂದು. ಈ ಸುಸಂದರ್ಭದಲ್ಲಿ ಅವರ ಕುಟುಂಬ ಸದಸ್ಯರ ಬಳಗ, ವಿಜಯ ಸಿಂಧೂರ ಆರ್ಟ್ ಗ್ಯಾಲರಿ, ಕರ್ನಾಟಕ ಲಲಿತಕಲಾ ಅಕಾಡೆಮಿ ಮತ್ತು ವಿಜಯಪುರದ ಕ್ಯಾನವಾಸ್ ಆರ್ಟ್ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಇಂದು ಅವರ ಹೆಸರಲ್ಲಿ ‘ವಿಜಯ ಸಿಂಧೂರ ಪ್ರಶಸ್ತಿ’ ಪ್ರದಾನ ಮಾಡಲಾಗುತ್ತಿದೆ. ವಿಜಯಪುರ ಮೂಲದ ಬೆಂಗಳೂರು ನಿವಾಸಿ, ಕಲಾವಿದ ನಂದಬಸಪ್ಪ ವಾಡೆ ಅವರು 2025ರ ವಿಜಯ ಸಿಂಧೂರ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಜಮಖಂಡಿಯ ವಿಜಯ ಸಿಂಧೂರ ಆರ್ಟ್ ಗ್ಯಾಲರಿಯಲ್ಲಿ ಸಂಜೆ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಸಹಯೋಗದಲ್ಲಿ ಒಂದು ದಿನದ ಚಿತ್ರಕಲಾ ಶಿಬಿರ ನಡೆಯಲಿದೆ. ಬೆಳಗ್ಗೆ 10.30ಕ್ಕೆ ಜಮಖಂಡಿ ಓಲೇಮಠದ ಪೂಜ್ಯ ಶ್ರೀ ಆನಂದ ದೇವರು ಅವರ ಸಾನಿಧ್ಯದಲ್ಲಿ ಶಾಸಕರಾದ ನಾಡೋಜಿ ಜಗದೀಶ ಗುಡಗುಂಟಿ ಅವರು ಶಿಬಿರ ಉದ್ಘಾಟಿಸಲಿದ್ದಾರೆ. ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾದ ಪ.ಸ.ಕುಮಾರ, ಹಿರಿಯ ಕಲಾವಿದರಾದ ಬಾಬು ಜತ್ತಕರ್ ಅವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಚಿತ್ರಕಲಾ ಶಿಬಿರದಲ್ಲಿ ಜಿ.ವಿ.ಹಂಪಣ್ಣವರ, ಬಿ.ಎಸ್.ಪಾಟೀಲ, ಪ್ರಭಾಕರ ಮಂಕಾಲ, ಎಚ್.ಎಂ.ವಿಶ್ವನಾಥ, ಶಿವು ಹೂಗಾರ, ಗಂಗಾಧರ ಮಾಯಾಚಾರಿ, ಸುಶೀಲ ತರಬರ, ಕೆ.ಎಸ್.ಬಸವರಾಜು, ಪ್ರಶಾಂತ ಮನಗೂಳಿ, ಸಂತೋಷ ಗುಡ್ಡೊಡಗಿ ಅವರು ಪಾಲ್ಗೊಳ್ಳಲಿದ್ದಾರೆ. ಸಂಜೆ ನಡೆಯಲಿರುವ ಸಮಾರಂಭದಲ್ಲಿ ವಿಜಯ ಸಿಂಧೂರ ಪ್ರಶಸ್ತಿಯನ್ನು ಕಲಾವಿದ ನಂದಬಸಪ್ಪ ವಾಡೆ ಅವರಿಗೆ ಲಲಿತಕಲಾ ಅಕಾಡೆಮಿ ಅಧ್ಯಕ್ಷರಾದ ಪ.ಸ.ಕುಮಾರ್ ಅವರು ಪ್ರದಾನ ಮಾಡಲಿದ್ದಾರೆ. ಮಾಜಿ ಶಾಸಕರು, ಕಲಾ ಪೋಷಕರಾದ ಆನಂದ ಸಿದ್ದು ನ್ಯಾಮಗೌಡ, ಇಂದಿರಾಗಾAಧಿ ರಾಷ್ಟಿçÃಯ ಕಲಾಕೇಂದ್ರದ ಪ್ರಾದೇಶಿಕ ನಿರ್ದೇಶಕರಾದ ಮಹೇಂದ್ರ ಡಿ., ಹಿರಿಯ ಕಲಾವಿದರಾದ ಪಿ.ಎಸ್.ಕಡೇಮನಿ, ಶ್ರೀಮತಿ ಮಹಾನಂದ ವಿಜಯ ಸಿಂಧೂರ, ರಾಜು ಸಿಂಧೂರ, ಕ್ಯಾನವಾಸ್ ಆರ್ಟ್ ಫೌಂಡೇಶನ್ ಕಾರ್ಯದರ್ಶಿ, ಕಲಾವಿದ ರಮೇಶ್ ಚವ್ಹಾಣ ಅವರು ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀಮತಿ ಸರಸ್ವತಿ ಸರಬದ ಅವರು ಲಘು ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ.
| ವಿಜಯ ಸಿಂಧೂರರ ಕಿರು ಪರಿಚಯ |
ವಿಜಯ ಸಿಂಧೂರ ಅವರು 1940ರಲ್ಲಿ ಜನಿಸಿ, ಮುಂಬೈನ ಜೆ.ಜೆ.ಕಲಾಶಾಲೆಯಲ್ಲಿ ಚಿತ್ರಕಲಾ ಪದವಿ ಪಡೆದುಕೊಂಡು ಉತ್ತುಂಗದ ಸಾಧನೆ ಮಾಡಿರುವ ಕರ್ನಾಟಕದ ಖ್ಯಾತ ಕಲಾವಿದರು. ತಮ್ಮ ರೇಖಾಕೃತಿ, ವರ್ಣಚಿತ್ರಗಳ ಮೂಲಕ ಕಲಾ ಕ್ಷೇತ್ರದಲ್ಲಿ ಛಾಪು ಮೂಡಿಸಿದವರು. ಕಲಾ ಶಿಕ್ಷಣಕ್ಕಾಗಿ ಮುಂಬೈ ಸೇರಿದ್ದರಿಂದ ಅನೇಕ ಖ್ಯಾತ ಕಲಾವಿದರ ಒಡನಾಟ ಹೊಂದಿದ್ದ ಸಿಂಧೂರ ಅವರು ಭಾವಚಿತ್ರದಲ್ಲಿ ಪರಿಣಿತರಾಗಿದ್ದರು. ಅಪ್ಪಟ ಗ್ರಾಮೀಣ ಪ್ರತಿಭೆಯಾಗಿದ್ದ ಸಿಂಧೂರರು ತಮ್ಮ ನಿತ್ಯ ಜೀವನದ ಅನುಭವದ ವಿಚಾರಗಳನ್ನೆ ವಸ್ತುವಾಗಿಸಿಕೊಂಡು ಕಲಾಕೃತಿಗಳನ್ನು ರಚಿಸುತ್ತಿದ್ದರು. ಅವರ ಅನೇಕ ಕಲಾಕೃತಿಗಳಿಗೆ ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ. 1965-67ರಲ್ಲಿ ಬಾಂಬೆ ಆರ್ಟ್ ಸೊಸೈಟಿಯಿಂದ ಭಾವಚಿತ್ರಕ್ಕೆ ಪ್ರಶಸ್ತಿ ಸಂದಿದೆ. 1967ರಲ್ಲಿ ಮುಂಬೈನ ಪಟೇಲ್ ಟ್ರೋಪಿ ಆರ್ಟ್ ಸೊಸೈಟಿ ಆಫ್ ಇಂಡಿಯಾ ಪ್ರಶಸ್ತಿ, ಕೇಂದ್ರ ಲಲಿತಕಲಾ ಅಕಾಡೆಮಿಯ ರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ವರ್ಣಶಿಲ್ಪಿ ಕೆ. ವೆಂಕಟಪ್ಪ ಪ್ರಶಸ್ತಿಗಳು ಇವರ ಕಲಾ ಸಾಧನೆಯ ಮುಡಿಗೇರಿವೆ.
ದಿವಂಗತ ವಿಜಯ ಸಿಂಧೂರ ಅವರ ಹೆಸರಲ್ಲಿ ನಾಡಿನ ಪ್ರತಿಭಾನ್ವಿತ ಕಲಾವಿದರೊಬ್ಬರಿಗೆ ಪ್ರತಿವರ್ಷ ಪ್ರಶಸ್ತಿ ನೀಡಲು ನಿರ್ಧರಿಸಿರುವುದು ಖುಷಿಯ ಸಂಗತಿಯಾಗಿದೆ. ಪ್ರಸಕ್ತ ಸಾಲಿನ ಪ್ರಶಸ್ತಿಯನ್ನು ಇಂದು ಪ್ರದಾನ ಮಾಡಲಾಗುತ್ತಿದೆ.
| ನಂದಬಸಪ್ಪ ವಾಡೆಗೆ ಸಿಂಧೂರ ಪ್ರಶಸ್ತಿ |
ವಿಜಯಪುರ ಮೂಲದವರಾದ ನಂದಬಸಪ್ಪ ವಾಡೆ ಅವರು ಈ ವರ್ಷದ ವಿಜಯ ಸಿಂಧೂರ ಪ್ರಶಸ್ತಿಗೆ ಭಾಜನರಾಗಿದ್ದಾರೆ. 1975ರಲ್ಲಿ ಜನಿಸಿದ ನಂದಬಸಪ್ಪ ವಾಡೆ ಅವರು ವಿಜಯಪುರ ಮತ್ತು ತುಮಕೂರಿನ ಕಲಾಶಾಲೆಯಲ್ಲಿ ಚಿತ್ರಕಲಾ ಶಿಕ್ಷಣ ಪಡೆದು ಸದ್ಯ ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 30 ವರ್ಷಗಳಿಂದ ನಿರಂತರವಾಗಿ ಕಲಾಕೃತಿಗಳ ರಚನೆಯಲ್ಲಿ ತೊಡಗಿಕೊಂಡಿರುತ್ತಾರೆ. ದೇಶದ ಅನೇಕ ಪ್ರತಿಷ್ಠಿತ ಗ್ಯಾಲರಿಗಳಲ್ಲಿ ಇವರ ಕಲಾಕೃತಿಗಳು ಪ್ರದರ್ಶನ ಕಂಡಿವೆ. ವಾಡೆ ಅವರ ಕಲಾಸೇವೆ ಗಮನಿಸಿ ಕರ್ನಾಟಕ ಲಲಿತಕಲಾ ಅಕಾಡೆಮಿ 2021-22ನೇ ಸಾಲಿನ ವರ್ಣಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.
ನಿತ್ಯ ಬಳಕೆಯ, ಐತಿಹಾಸಿಕ ವಿಶೇಷ ವಸ್ತುಗಳು, ಹಣ್ಣು-ತರಕಾರಿಗಳು, ಪ್ರಾಣಿ-ಪಕ್ಷಿಗಳು ಹಾಗೂ ಇನ್ನೂ ಅನೇಕ ವಸ್ತು ವಿಷಯಗಳನ್ನಿಟ್ಟುಕೊಂಡು ಕಲಾಕೃತಿಗಳನ್ನು ರಚಿಸುತ್ತಾರೆ. ನೈಜತೆಗೆ ಹತ್ತಿರವೆನಿಸುವ ರೀತಿಯಲ್ಲಿ ಕಲಾಕೃತಿಗಳನ್ನು ರಚಿಸುತ್ತಾರೆ. ಅವರ ಸಾಧನೆ ಪರಿಗಣಿಸಿ ಇದೀಗ ಇಂದು ವಿಜಯ ಸಿಂಧೂರ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಕಲಾವಿದ ನಂದಬಸಪ್ಪ ವಾಡೆ ಅವರಿಗೆ ಅಭಿನಂದನೆಗಳು. ಹಾಗೇ, ವಿಜಯ ಸಿಂಧೂರ ಅವರ ಹೆಸರಲ್ಲಿ ಪ್ರಶಸ್ತಿ ನೀಡುವ ನಿರ್ಧಾರಕ್ಕೆ ಕಾರಣೀಕರ್ತರಾದ ಎಲ್ಲರಿಗೂ ಅಭಿನಂದನೆಗಳು 💐

Share This

Leave a Reply

Your email address will not be published. Required fields are marked *