• ಹಾಸನದ ಕಲಾಶ್ರೀ ಗ್ಯಾಲರಿಯಲ್ಲಿ ಮೈಸೂರಿನ
• ಶೋಭರಾಣಿ ಅವರ ಏಕವ್ಯಕ್ತಿ ಕಲಾಪ್ರದರ್ಶನ
ನಾವು ಪಾಲ್ಗೊಳ್ಳುವ ಎಲ್ಲಾ ಕಾರ್ಯಕ್ರಮಗಳೆಲ್ಲವೂ ನಮಗೆ ಇಷ್ಟ ಆಗಿಬಿಡುವುದಿಲ್ಲ. ಕೆಲವೇ ಕೆಲವು ಆಪ್ತವೆನಿಸುತ್ತವೆ. ಅಂತಹ ಕಾರ್ಯಕ್ರಮಗಳಲ್ಲಿ ‘ಮತ್ಸ್ಯ ಹೆಜ್ಜೆ’ ಕಲಾಪ್ರದರ್ಶನ ಉದ್ಘಾಟನೆ ಒಂದಾಗಿತ್ತು.
ಮೈಸೂರಿನ ಕಲಾವಿದೆ, ಕಲಾಶಿಕ್ಷಕಿ ಶೋಭರಾಣಿ ಅವರ ಕಲಾಕೃತಿಗಳ ಕಲಾಪ್ರದರ್ಶನ ಹೃದಯಸ್ಪರ್ಶಿ ಅನಿಸಿತು. ಇದಕ್ಕೆ ಕಾರಣಗಳು ಹಲವು. ಮೊದಲನೆಯದಾಗಿ, ಶೋಭರಾಣಿ ಅವರು ಕಲಾಶಿಕ್ಷಣ ಪಡೆದಿರುವ ಕಲಾಶಾಲೆ ಮೈಸೂರಿನ ಶ್ರೀ ಕಲಾನಿಕೇತನ ನಾನು ಓದಿರುವ ಕಲಾಶಾಲೆ ಕೂಡ ಹೌದು. ಶೋಭರಾಣಿ ಅವರು ಕೂಡ ನಾನು ಓದುವ ಸಂದರ್ಭದಲ್ಲೆ ಕಲಾಶಿಕ್ಷಣ ಪಡೆಯುತ್ತಿದ್ದರು. ಅಂದಿನಿಂದಲೂ ಪರಿಚಿತರು. ಇನ್ನು ಇವರ ಪತಿ, ಜಯದೇವ್ ಅವರು ನನಗೆ ಆಪ್ತರು ಕೂಡ. ಅನೇಕ ಸಂದರ್ಭಗಳಲ್ಲಿ ಅನೇಕ ವಿಚಾರಗಳ ಬಗ್ಗೆ ಚರ್ಚಿಸಿದ್ದಿದೆ. ಇನ್ನು ಈ ಕಲಾಪ್ರದರ್ಶನ ನಡೆಯುತ್ತಿರುವ ಸ್ಥಳ ಹಾಸನದ ಕಲಾಶ್ರೀ ಗ್ಯಾಲರಿ ಸಂಸ್ಥಾಪಕ, ಮಾಲಕರಾದ ಬಿ.ಎಸ್.ದೇಸಾಯಿ ಅವರೂ ಆಪ್ತರಾಗಿದ್ದಾರೆ. ಇವೆಲ್ಲದರ ಜೊತೆಗೆ ಜಯದೇವ್, ದೇಸಾಯಿ ಅವರ ಆಪ್ತರ ವಲಯದಲ್ಲಿ ನಾನೂ ಒಬ್ಬನಿದ್ದೇನೆ ಎನ್ನುವ ಖುಷಿ. ಒಟ್ಟಾರೆ ಈ ಕಾರ್ಯಕ್ರಮ ಆಪ್ತವೆನಿಸಿತು.
ಜಯದೇವ ಅವರು ಕಾರ್ಯಕ್ರಮಕ್ಕೆ ಬರಬೇಕೆಂದು ಆಹ್ವಾನಿದಾಗಲೇ ಹೋಗಲೇಬೇಕೆಂದು ನಿರ್ಧರಿಸಿದ್ದೆ. ನಾನಾ ಕಾರಣಗಳಿಂದ ಹತ್ತಿವೆನಿಸಿದ್ದ ಈ ಕಾರ್ಯಕ್ರಮ ಬಹಳ ಚೆನ್ನಾಗಿ ನಡೆಯಿತು.
ಕವಿ, ಸಾಮಾಜಿಕ ಹೋರಾಟಗಾರ್ತಿ ರೂಪ ಅವರು ಕಲಾಪ್ರದರ್ಶನಕ್ಕೆ ಚಾಲನೆನೀಡಿದರು. ಈ ವೇಳೆ ಹಾಸನದ ಅನೇಕ ಕಲಾವಿದರು ಹಾಜರಿದ್ದರು. ಶೋಭರಾಣಿ ಅವರ ‘ಮತ್ಸ್ಯ ಹೆಜ್ಜೆ’ ಸರಣಿ ಕಲಾಕೃತಿಗಳ ಕುರಿತು ಮೆಜ್ಜುಗೆ ವ್ಯಕ್ತಪಡಿಸಿದರು. ‘ ಕಲೆ ಮತ್ತು ಕಲಾಕೃತಿ’ ಕುರಿತು ಮಾತನಾಡುವ ಅವಕಾಶವೊಂದನ್ನು ನನಗೂ ಇಟ್ಟಿದ್ದರು. ಹೀಗಾಗಿ ಅನಿವಾರ್ಯವಾಗಿ ಮಾತನಾಡಬೇಕಾಗಿ ಬಂತು.
ಮಾತುಗಳು ಯಾರ್ಯಾರಿಗೆ ಹಿಡಿಸಿದವೋ ಏನೋ ಗೊತ್ತಿಲ್ಲ. ಮಾತನಾಡಿದಷ್ಟು ಬೈದುಕೊಳ್ಳಲಿಲ್ಲ ಎಂ ಭ್ರಮೆಯಲ್ಲಿ ನಾನಿದ್ದೆ. ಕೆಲವೊಮ್ಮೆ ಕಲಾಕೃತಿಗಳು ನಮ್ಮನ್ನು ಮಾತನಾಡಿಸುವಂತೆ ಮಾಡುತ್ತವೆ. ಶೋಭರಾಣಿ ಅವರ ಕಲಾಕೃತಿಗಳು ಕೂಡ ಪ್ರತಿಯೊಬ್ಬರನ್ನೂ ಮಾತನಾಡಿಸಿದವು. ಮೀನಿನ ಹೆಜ್ಜೆಗಳ ಹುಡುಕಾಟದಲ್ಲಿ ಎಲ್ಲರೂ ಭಾವನೆಗಳ ಪಥದಲ್ಲಿ ಓಡಾಡಿದರು. ಕಲಾಪ್ರದರ್ಶನ ವೀಕ್ಷಿಸಿ ತಮ್ಮ ಹೆಜ್ಜೆ ದಾಖಲಿಸಿದರು. ಮತ್ಸ್ಯ ಹೆಜ್ಜೆಗೆ ಸಾಕ್ಷಿಯಾದರು.
ಶೋಭರಾಣಿ ಅವರು ತಮ್ಮ ಮನೆಯಲ್ಲಿನ ಅಕ್ವೇರಿಯಂ ಮೀನುಗಳ ಹೆಜ್ಜೆ ಹಿಂದೆ ಬಿದ್ದು ರೇಖೆ, ವರ್ಣಗಳಲ್ಲಿ ದಾಖಲಿಸಿದ ಪರಿ ಅವರ ಮೇಲಿನ ಅಘಾದವಾದ ಪ್ರಭಾವ ಬೀರಿದ್ದರ ಅಭಿವ್ಯಕ್ಕಿಗೆ ಕಾರಣವಾಗಿದ್ದವು. ಮೇಲ್ನೋಟಕ್ಕೆ ನೈಜ ಮೀನುಗಳ ಹರವು ಅನಿಸಿದರೂ, ಅನೇಕ ಕಲಾಕೃತಿಗಳ ರೇಖೆಗಳು ಒಂದು ಅಮೂರ್ತವಾದ ಭಾವವನ್ನೂ ಮೂಡಿಸುತ್ತಿದ್ದವು. ಆ ರೀತಿಯಲ್ಲಿ ಮತ್ಸ್ಯ ಹೆಜ್ಜೆಗೆ ಜೀವತುಂಬಿದ್ದರು. ತಮ್ಮ ಮೊದಲ ಏಕವ್ಯಕ್ತಿ ಕಲಾಪ್ರದರ್ಶನದಲ್ಲಿ ಒಂದು ನಿಖರತೆ ಇದೆ ಎನ್ನುವುದನ್ನು ಗೊತ್ತುಮಾಡಿದರು.
ಶೋಭರಾಣಿ ಅವರು ಕಲಾವಿದೆಯಾಗಿ ಇನ್ನಷ್ಟು ದೂರ ಸಾಗಬೇಕೆನ್ನುವುದು ಎಷ್ಟು ಸತ್ಯವಾಗಿ ಕಾಣುವುದೋ, ಅವರಲ್ಲಿನ ವೀಕ್ಷಕಗುಣ ಪ್ರಬುದ್ಧ, ಪ್ರೌಢವೆನಿಸುವಂತದ್ದು ಎನ್ನುವುದನ್ನು ಈ ಪ್ರದರ್ಶನದಲ್ಲಿ ದಾಖಲಿಸುವ ಪ್ರಯತ್ನವಾಗಿದೆ. ಹಾಗೆ ಸಂಯೋಜನೆಯಲ್ಲಿ ಪರಿಣಿತೆ ಎನ್ನುವುದನ್ನೂ ಈ ಕಲಾಕೃತಿಗಳಲ್ಲಿ ದಾಖಲಿಸಿದ್ದಾರೆ. ಶಕ್ತಿಯುತ ಮತ್ತು ಲಾಲಿತ್ಯದಿಂದ ಕೂಡಿದ ಈ ರೇಖೆಗಳು ಮುಂದಿನ ದಿನಗಳಲ್ಲಿ ಹೇಗೆ ಹರಿದಾವು ಎಂಬ ಕುತೂಹಲ ನನಗಿದೆ. ವೃತ್ತಿಪರ ಕಲಾವಿದೆಯಾಗಿ ಸಮಕಾಲೀನ ಚಿಂತನೆಗಳ ಮೂಲಕ ಹೇಗೆ ಬದಲಾವಣೆಯ ರೂಪ ಕೊಡುತ್ತಾರೆ ಎನ್ನುವ ಕೌತುಕ ಮೂಡಿಸಿದ್ದಾರೆ, ನಿರೀಕ್ಷೆ ಹೆಚ್ಚಿಸಿದ್ದಾರೆ.
ಮಹಿಳಾ ಸಂವೇದನೆ ಅವರ ಕಲಾಕೃತಿಗಳಲ್ಲಿ ಕಾಣಿಸಿತು. ತಾಯ್ತನದ ಪ್ರೀತಿಗೆ ಮೀನುಗಳು ವಸ್ತುವಾದವು. ಇದರಿಂದ ಹೊರತಾದ ಇನ್ನಾವ ಭಾವ ಶೋಭರಾಣಿ ಅವರನ್ನು ಯಾವ ದಿಕ್ಕಿನಲ್ಲಿ ಹೋಗುವಂತೆ ಮಾಡುತ್ತದೆನ್ನುವ ಕುತೂಹಲವೂ ಇದೆ. ಕಲಾವಿದೆಯರಿಗೆ ಪರ್ವಕಾಲವಾದ ಈ ದಿನಗಳಲ್ಲಿ ಶೋಭರಾಣಿ ಪುಟಿದೇಳುವ ಪ್ರಯತ್ನದ ಪ್ರಮುಖ ಹೆಜ್ಜೆ ಇಟ್ಟಿದ್ದಾರೆ. ಅವರ ಮುಂದಿನ ಕನಸುಗಳು ನನಸಾಗಲಿ. ಕಲಾವಿದೆಯಾಗಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸೋಣ.
ಸ್ನೇಹಿತರೆ ಹಾಸನಕ್ಕೆ ಭೇಟಿ ನೀಡಿದರೆ ಕಲಾಪ್ರದರ್ಶನ ವೀಕ್ಷಿಸಿ ಬನ್ನಿ. ಕಲಾಪ್ರದರ್ಶನ ನಾಳೆ, ಏಪ್ರಿಲ್ 27ರಂದು ಸಂಪನ್ನಗೊಳ್ಳಲಿದೆ.